ಪೊನ್ನಂಪೇಟೆ(TIMES OF COORG): ತೀವ್ರ ಅನುಮಾನಕ್ಕೆ ಕಾರಣವಾಗಿದ್ದ ವಿರಾಜಪೇಟೆ ಬೇಟೋಳಿ ಸಮೀಪದ ಗುಂಡಿಕೆರೆಯ ಎಂ.ಎಂ.ಮೂಸ ಅವರ ನಿಗೂಢ ಸಾವು ಪ್ರಕರಣ ಹೊಸ ತಿರುವೊಂದನ್ನು ಪಡೆದುಕೊಂಡಿದೆ. ಮೂಸ ಅವರು ಖರೀದಿಸಿದ್ದ ಎತ್ತು ಕಳೆದ ಮೂರು ದಿನಗಳ ಹಿಂದೆ ಸಾವನ್ನಪ್ಪಿದೆ. ಇದರಿಂದಾಗಿ ಜನತೆಯಲ್ಲಿ ಇದ್ದ ಸಂಶಯ ಮತ್ತಷ್ಟು ಹೆಚ್ಚಾಗಿ ಮೂಸ ಅವರ ನಿಗೂಢ ಸಾವಿನ ಸುತ್ತ ಅನುಮಾನದ 'ಹುತ್ತ' ಬೆಳೆಯತೊಡಗಿದೆ. ಈ ಮಧ್ಯೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಕರಣವನ್ನು ಮಡಿಕೇರಿಯಲ್ಲಿರುವ ಜಿಲ್ಲಾ ಅಪರಾಧ ಪತ್ತೆ ದಳ (ಡಿ.ಸಿ.ಐ.ಬಿ.)ಕ್ಕೆ ವರ್ಗಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಸಿ.ಐ.ಬಿ. ತಂಡ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ.
ಏ.7ರಂದು ಎತ್ತು ಖರೀದಿಸಲೆಂದು ಗುಂಡಿಕೆರೆಯ ತಮ್ಮ ಮನೆಯಿಂದ ತೆರಳಿದ್ದ ಮೂಸ ಅವರು ಅಂದು ಮನೆಗೆ ಮರಳಿ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈ ಕುರಿತು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 5 ದಿನಗಳ ನಂತರ ಏ. 11ರಂದು ಪೊಲೀಸರು ಮತ್ತು ಅರಣ್ಯ ಇಲಾಖೆ ನಡೆಸಿದ ಜಂಟಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಬಿಟ್ಟಂಗಾಲ ಸಮೀಪದ ಕೊಳತ್ತೋಡಿನ ಪಾಳುಬಿದ್ದ ಕಾಫಿ ತೋಟದ ಅಂಚಿನಲ್ಲಿ ಮೂಸ ಅವರ ಶವ ಪತ್ತೆಯಾಗಿತ್ತು. ಇದರಿಂದಾಗಿ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವು ಪ್ರಕರಣ ದಾಖಲಾಯಿತು.
ಎತ್ತು ಸಾವು
ಅಂದು ಬಿಟ್ಟಂಗಾಲ ಸಮೀಪದ ಕೊಳತ್ತೋಡಿನ ಮುರುವಂಡ ರಾಜ ಎಂಬುವರಿಂದ ರೂ. 18000 ಹಣ ನೀಡಿ ಮೂಸ ಅವರು ಎತ್ತೊಂದನ್ನು ಖರೀದಿಸಿದ್ದರು. ನಂತರ ಅದನ್ನು ಕಾಲ್ನಡಿಗೆಯಲ್ಲಿ ಗುಂಡಿಕೆರೆಗೆ ಕೊಂಡೊಯ್ಯುತ್ತಿದ್ದ ವೇಳೆ ಎತ್ತಿನೊಂದಿಗೆ ಮೂಸ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು.
ಮೂಸ ಅವರ ಶವ ಪತ್ತೆಯಾದ ಏ. 11ರ ಒಂದು ದಿನ ಮೊದಲು ಏ.10ರಂದು ಕೊಳತ್ತೋಡಿನ ಕಾಫಿ ತೋಟವೊಂದರಲ್ಲಿ ಗಿಡವೊಂದಕ್ಕೆ ಸುತ್ತಿಕೊಂಡ ಸ್ಥಿತಿಯಲ್ಲಿ ಎತ್ತು ಪತ್ತೆಯಾಗಿತ್ತು. ಇದು ಈ ಭಾಗವನ್ನು ಕೇಂದ್ರೀಕರಿಸಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲು ಪೊಲೀಸರಿಗೆ ಸುಳಿವು ನೀಡಿದಂತಾಗಿತ್ತು.
ಮೂಸ ಅವರು ಕಾಣೆಯಾಗಿ 4 ದಿನಗಳವರೆಗೂ ಎತ್ತು ಪತ್ತೆಯಾಗಿರಲಿಲ್ಲ. ಏ 10ರಂದು ಸಂಜೆ ವೇಳೆ ಆ ಭಾಗದ ರಸ್ತೆ ಬದಿಯ ಕಾಫಿ ತೋಟವೊಂದರಲ್ಲಿ ಧಿಡೀರನೆ ಎತ್ತು ಕಾಣಿಸಿಕೊಂಡಿದ್ದು ಮತ್ತೊಂದು ಅನುಮಾನಕ್ಕೆ ಕಾರಣವಾಗಿತ್ತು. ಎತ್ತನ್ನು ಈ ವೇಳೆ ಪರಿಶೀಲಿಸಿದಾಗ ಹೊಟ್ಟೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು. ಇದು ಸಹಜವಾಗಿಯೇ ಅನುಮಾನವನ್ನು ಹೆಚ್ಚು ಮಾಡಿತು. ಮೂಸ ಅವರು ಕಾಣೆಯಾದ ದಿನದಿಂದಲೇ ಈ ಎತ್ತು ರಸ್ತೆ ಬದಿಯ ಅದೇ ಕಾಫಿ ಗಿಡಕ್ಕೆ ಸುತ್ತಿಕೊಂಡ ಸ್ಥಿತಿಯಲ್ಲೇ ಇತ್ತೇ? 4 ದಿನಗಳ ಕಾಲ ಎತ್ತು ಅಲ್ಲೇ ಇದ್ದಿದ್ದರೆ ಯಾರ ಗಮನಕ್ಕೆ ಬರದಿರಲು ಕಾರಣವೇನು? ಗಿಡಕ್ಕೆ ಸುತ್ತಿಕೊಂಡ ಸ್ಥಿತಿಯಲ್ಲಿ ಎತ್ತು ಅಷ್ಟು ದಿನ ಅಲ್ಲೇ ಇರಲು ಸಾಧ್ಯವೇ? ಎಂಬುದು ಇದೀಗ ಎದ್ದಿರುವ ಪ್ರಶ್ನೆಯಾಗಿದೆ. ಅಲ್ಲದೆ ಎತ್ತು ನಾಲ್ಕು ದಿನದಿಂದ ಅಲ್ಲೇ ಇದ್ದಿದ್ದರೆ ಸ್ಥಳದಲ್ಲಿ ಕಂಡು ಬರಬೇಕಿದ್ದ ಮೂತ್ರ ಮತ್ತು ಸಗಣಿ ವಿಸರ್ಜಿಸಿದ ಯಾವುದೇ ಕುರುಹುಗಳಿಲ್ಲ. ಇದು ಸ್ವಾಭಾವಿಕವಾಗಿ ಜನರ ಸಂಶಯವನ್ನು ಮತ್ತಷ್ಟು ಹೆಚ್ಚು ಮಾಡುತಿದೆ.
ಕೊನೆ ಗಳಿಗೆಯಲ್ಲಿ ಈ ಎತ್ತನ್ನು ತಂದು ಈ ತೋಟದಲ್ಲಿ ಬಿಡಲಾಯಿತು ಎಂಬ ಸಂಶಯವೂ ಜನ ವಲಯದಲ್ಲಿ ವ್ಯಕ್ತವಾಗುತ್ತಿದೆ. ಎತ್ತನ್ನು ಅಂದು ವಶಕ್ಕೆ ಪಡೆದಿದ್ದ ಪೊಲೀಸರು, ಎತ್ತಿಗೆ ಗಾಯವಾಗಿದ್ದರಿಂದ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು ಎಂಬ ಮಾಹಿತಿ ಲಭಿಸಿದೆ. ನಂತರ ಎತ್ತಿನ ಮೂಲ ಮಾಲೀಕರಾದ ಮುರುವಂಡ ರಾಜ ಅವರಿಗೆ ಹಸ್ತಾಂತರಿಸಿದ ಪೊಲೀಸರು ಅದರ ಆರೈಕೆಗಾಗಿ ಸೂಚಿಸಿದ್ದರು.
ಈ ಮಧ್ಯೆ ಮುರುವಂಡ ರಾಜ ಅವರು ಎತ್ತಿಗಾಗಿ ಮೂಸ ನೀಡಿದ್ದ ರೂ.18000 ಹಣವನ್ನು ಮೃತ ಮೂಸ ಅವರ ಪುತ್ರನಿಗೆ ವಾಪಾಸ್ಸು ನೀಡಿ ಮಾನವೀಯತೆ ಮೆರೆದಿದ್ದರು.
ರಾಜಾ ಅವರ ಹಾರೈಕೆಯಲ್ಲಿದ್ದ ಎತ್ತು, ಎಂಟು ದಿನಗಳ ನಂತರ ಕಳೆದ ಸೋಮವಾರ ಸಾವನ್ನಪ್ಪಿದೆ. ಎತ್ತು ಸತ್ತ ವಿಷಯ ಪೊಲೀಸರಿಗೆ ತಿಳಿಸಿದಾಗ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪಶುವೈದ್ಯಾಧಿಕಾರಿಗಳಿಂದ ಮರಣೋತ್ತರ ಪರೀಕ್ಷೆಯೂ ನಡೆಸಿದ್ದಾರೆ. ಎತ್ತಿನ ಹೊಟ್ಟೆಯ ಭಾಗಕ್ಕೆ ಆದ ಗಂಭೀರ ಗಾಯದಿಂದಾಗಿ ಅದರ ಕರುಳಿಗೆ ಪೆಟ್ಟಾಗಿದೆ. ಇದೇ ಎತ್ತಿನ ಸಾವಿಗೆ ಪ್ರಮುಖ ಕಾರಣ ಎಂದು ಈ ವೇಳೆ ತಿಳಿದು ಬಂದಿದೆ. ಈ ಗಾಯ ಬಹುತೇಕ ಕತ್ತಿ ಏಟಿನಿಂದ ಆಗಿರಬಹುದೆಂಬ ಶಂಕೆ ಬಲವಾಗಿದೆ. ಗುಂಡೇಟಿನಿಂದ ಈ ರೀತಿಯ ಗಾಯವಾಗುವ ಸಾಧ್ಯತೆ ಕಡಿಮೆ ಎನ್ನಬಹುದು. ಒಂದು ವೇಳೆ ಎತ್ತು ತೋಟದಲ್ಲಿ ಸಂಚರಿಸುವಾಗ ಮರಗಿಡಗಳ ಕೊಂಬೆ ತಾಗಿದರೂ ಇಷ್ಟು ಪ್ರಮಾಣದ ಗಾಯವಾಗಲು ಸಾಧ್ಯವಿಲ್ಲ ಎನ್ನುವುದು ಅನುಭವಿಗಳ ಮಾತಾಗಿದೆ. ವಿವಾದಿತ ಎತ್ತು ಇದೀಗ ಸಾವನ್ನಪ್ಪಿರುವುದು ನಿಗೂಢ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಂತಾಗಿದೆ.
ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿರುವ ಡಿ.ಸಿ.ಐ.ಬಿ. ಪೊಲೀಸರ ತಂಡ ಇತ್ತೀಚೆಗೆ ಮೂಸ ಅವರ ಶವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಅಲ್ಲದೆ ಎತ್ತು ಮಾರಾಟ ಮಾಡಿದ್ದ ಮುರುವಂಡ ರಾಜ ಮತ್ತು ಅಂದು ಮೂಸ ಅವರು ಎತ್ತಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ಕಂಡ ಪ್ರತ್ಯೇಕದರ್ಶಿಗಳಿಂದಲೂ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ. ಹೀಗೆ ಮೊದಲ ಸುತ್ತಿನ ತನಿಖೆಯನ್ನು ಡಿ.ಸಿ.ಐ.ಬಿ. ಪೊಲೀಸರ ತಂಡ ಪೂರ್ಣಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಮೂಸ ಅವರ ಶವದ ಸ್ವಲ್ಪ ಭಾಗ ಕೊಳೆತು ದುರ್ವಾಸನೆ ಬಂದಿದ್ದರೂ ಯಾವುದೇ ಕಾಡುಪ್ರಾಣಿ ಅದನ್ನು ತಿಂದಿರಲಿಲ್ಲ. ಕಾಡಂಚಿನ ಪಾಳುಬಿದ್ದ ತೋಟದಲ್ಲಿ 5 ದಿನಗಳ ಕಾಲ ಶವ ಬಿದ್ದಿದ್ದರೂ ಯಾವುದೇ ಪ್ರಾಣಿ ಅಷ್ಟು ದಿನ ಶವದತ್ತ ಸುಳಿಯದಿರುವುದು ಇನ್ನೊಂದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಒಟ್ಟಿನಲ್ಲಿ ಮೂಸ ಅವರ ಸಾವಿನ ನಿಗೂಢತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಿದರೆ ಈ ಪ್ರಕರಣವನ್ನು ಬೇಧಿಸುವುದು ಕಷ್ಟಸಾಧ್ಯವಲ್ಲ ಎಂಬುದು ನೊಂದ ಕುಟುಂಬದವರ ಮಾತಾಗಿದೆ.
ಸಂಜೆ 4ರವರೆಗೆ ಎಲ್ಲಿದ್ದರು?!
ಖರೀದಿ ವಹಿವಾಟು ಪೂರ್ಣಗೊಂಡು ಏ. 7ರಂದು ಸಂಜೆ 4.30 ರ ಸಮಯದಲ್ಲಿ ಎತ್ತಿನೊಂದಿಗೆ ತಮ್ಮ ಮನೆಯಿಂದ ಮೂಸ ಅವರು ತೆರಳಿದ್ದಾರೆ ಎಂಬುದು ಮುರುವಂಡ ರಾಜ ಅವರ ಹೇಳಿಕೆಯಾಗಿದೆ. ಆದರೆ ಬೆಳಿಗ್ಗೆ 9ಗಂಟೆಯ ಸಮಯದಲ್ಲಿ ಗುಂಡಿಕೆರೆ ಮನೆಯಿಂದ ಹೊರಟ ಮೂಸ ಅವರು ಸಂಜೆ 4 ಗಂಟೆಯವರೆಗೆ ಎಲ್ಲಿದ್ದರೂ ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವಾಗುತ್ತಿದೆ.
ಅಲ್ಲದೆ ಮೂಸ ಅವರು ಮನೆಯಿಂದ ತೆರಳುವಾಗ ಅವರ ಬಳಿ ರೂ. 28000 ಹಣವಿತ್ತು ಎಂದು ಅವರ ಮನೆಯವರೇ ಹೇಳಿದ್ದಾರೆ. ಈ ಪೈಕಿ ಎತ್ತು ಖರೀದಿಗಾಗಿ ರೂ.18000 ಖರ್ಚು ಮಾಡಿ ನಂತರ ಅವರ ಬಳಿ ಉಳಿದಿರಬೇಕಾದ ರೂ.10000 ಹಣ ಎಲ್ಲಿ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಮೂಸ ಅವರ ಶವ ಪರಿಶೀಲನೆ ವೇಳೆ ಯಾವುದೇ ಹಣ ಪತ್ತೆಯಾಗಿರಲಿಲ್ಲ.
ಇದರ ಮಧ್ಯೆ ಕೋವಿಡ್ -19ರ ಭೀತಿಯಿಂದಾಗಿ ಲಾಕ್ಡೌನ್ ಇರುವುದರಿಂದ ಮೂಸ ಅವರ ಮರಣೋತ್ತರ ಪರೀಕ್ಷೆ ವರದಿ ಪೊಲೀಸರ ಕೈ ಸೇರಲು ವಿಳಂಬವಾಗುತ್ತಿದೆ ಎನ್ನಲಾಗಿದೆ. ಇದು ಪೋಲೀಸರ ತನಿಖೆಗೆ ಸ್ವಲ್ಪ ತೊಡಕ್ಕಾಗಿದೆ ಎಂದು ಹೇಳಬಹುದು.
No comments
Post a Comment