ಲಾಕ್​​​ಡೌನ್​​ ಮಧ್ಯೆ ಮನೆಗೆ ಕನ್ನ: ವಿರಾಜಪೇಟೆಯಲ್ಲಿ ಚಿನ್ನಾಭರಣ, ನಗದು ಕದ್ದೊಯ್ದ ಖದೀಮರು..!

No comments
      ವಿರಾಜಪೇಟೆ(TIMES OF COORG):- ಕೊರೊನಾ ಭೀತಿಯಿಂದ ಲಾಕ್​ಡೌನ್ ಜಾರಿ ಮಾಡಲಾಗಿದೆ, ಇದರ ನಡುವೆ ಖದೀಮರು ಮನೆಯೊಂದಕ್ಕೆ ಕನ್ನ ಹಾಕಿ ನಗದು, ಚಿನ್ನಾಭರಣ ಕದ್ದೊಯ್ದ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.

ವಿರಾಜಪೇಟೆ: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ವರ್ತಕರೊಬ್ಬರ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿರುವ ಘಟನೆ ನಡೆದಿದೆ.

ವರ್ತಕ ಎನ್‌.ಶ್ರೀನಿವಾಸ್‌ ಎಂಬುವರ ಮನೆಯಲ್ಲಿ ಸುಮಾರು 5 ಲಕ್ಷ ಮೌಲ್ಯದ ಚಿನ್ನಾಭರಣ, ಐದು ಸಾವಿರ ನಗದು ಕಳವು ಮಾಡಲಾಗಿದೆ.
ವಿರಾಜಪೇಟೆ ಮುಖ್ಯ ರಸ್ತೆಯ ಒತ್ತಾಗಿರುವ ಗಾಂಧಿನಗರಕ್ಕೆ ಹೋಗುವ ತಿರುವಿನಲ್ಲಿರುವ ಮನೆಯ ಹೆಂಚನ್ನು ತೆಗೆದು ಒಳ ನುಗ್ಗಿದ ಕಳ್ಳರು ಮನೆಯ ಮಾಲೀಕರು ಅವರ ಕುಟುಂಬದವರು ಮಲಗಿದ್ದ ಪಕ್ಕದ ಕೊಠಡಿಯಲ್ಲಿದ್ದ ಅಲ್ಮೇರಾದ ಬಾಗಿಲನ್ನು ತೆಗೆದು ಒಳಗಿನ ಖಾನೆಯಲ್ಲಿಟ್ಟಿದ್ದ ಚಿನ್ನದ ಆಭರಣಗಳು ಸೇರಿದಂತೆ ಇದರ ಜೊತೆಯಲ್ಲಿಟ್ಟಿದ್ದ 5 ಸಾವಿರ ನಗದು ಕಳವು ಮಾಡಲಾಗಿದೆ.

ಮನೆಯ ಮಾಲೀಕರಾದ ಶ್ರೀನಿವಾಸ್‌ ಅವರು ಬೆಳಗ್ಗೆ ಎದ್ದು ನೋಡಿದಾಗ ಅಲ್ಮೇರಾದ ಬಾಗಿಲು ತೆರೆದಿತ್ತು. ಖಾನೆಯ ಒಳಗಡೆ ಇದ್ದ ಎಲ್ಲ ಚಿನ್ನಾಭರಣ, ನಗದನ್ನು ದೋಚಲಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ದೂರುದಾರರಾದ ಶ್ರೀನಿವಾಸ್‌ ಅವರ ಮನೆಯ ಮುಂದೆ ಹಾರ್ಡ್‌ವೇರ್‌ ಮಳಿಗೆ ಇದ್ದು ಮನೆ ಅದರ ಜೊತೆಯಲ್ಲಿಯೇ ಇದೆ. ಯಾರೋ ಪರಿಚಿತ ದುಷ್ಕರ್ಮಿಗಳೇ ಈ ಕಳವು ನಡೆಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಕೊರೊನಾ ವೈರಸ್‌ನ ಲಾಕ್‌ಡೌನ್‌ ನಿರ್ಬಂಧದ ಅವಧಿಯಲ್ಲಿ ಪೊಲೀಸರ ಕಟ್ಟೆಚ್ಚರದಲ್ಲೂ ರಾತ್ರಿ 11 ಗಂಟೆಯಿಂದ ಬೆಳಗಿನ 5 ಗಂಟೆ ಅವಧಿಯೊಳಗೆ ಈ ಕಳವು ನಡೆದಿರುವುದು ವಿಪರ್ಯಾಸ.

ಪ್ರಕರಣ ದಾಖಲಿಸಿಕೊಂಡ ವಿರಾಜಪೇಟೆ ಪೊಲೀಸರು ಕಳವು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಎರಡು ತನಿಖಾ ತಂಡಗಳನ್ನು ರಚಿಸಿ ಶೋಧನೆ ಮುಂದುವರೆಸಿದ್ದಾರೆ. ಸ್ಥಳಕ್ಕೆ ಮಡಿಕೇರಿಯಿಂದ ಶ್ವಾನದಳ ಕರೆಸಲಾಗಿತ್ತು.

No comments

Post a Comment