ವರದಿ :ಝಕರಿಯ ನಾಪೋಕ್ಲು
ನಾಪೋಕ್ಲು (Times Of Coorg) : ನಾಪೋಕ್ಲು ವಿನಿಂದ ವಿರಾಜಪೇಟೆಗೆ ಹೋಗುವ ಮುಖ್ಯರಸ್ತೆಯ ಕೊಳಕೇರಿ ಗ್ರಾಮದ ಕೋಟೇರಿ ಎಂಬಲ್ಲಿ ರಸ್ತೆಯು ಗುಂಡಿಗಳಿಂದ ಕೂಡಿದ್ದು ವಾಹನ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಸಂಚರಿಸಲು ಅಯೋಗ್ಯವಾಗಿದೆ. ಆದ್ದರಿಂದ ಕೂಡಲೇ ಗುಂಡಿ ಮುಚ್ಚಿ ದುರಸ್ತಿಪಡಿಸದಿದ್ದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ರಸ್ತೆ ತಡೆ ನಡೆಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಸಂಬಂಧಿಸಿದ ಇಲಾಖೆಯವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.
ಅಲ್ಲದೆ ಈ ರಸ್ತೆಯನ್ನು ದುರಸ್ತಿ ಪಡಿಸಲು ಕಳೆದ ವರ್ಷಗಳಿಂದ ಪತ್ರಿಕೆಯ ಮುಖಾಂತರ ಗ್ರಾಮಸ್ಥರು ಹಲವಾರು ಬಾರಿ ಲೋಕೋಪಯೋಗಿ ಇಲಾಖೆಯವರ ಗಮನಸೆಳೆದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಬಿಸಿಲು ಕಾಲದಲ್ಲಿ ತೆಪ್ಪಗಿದ್ದ ಇಲಾಖೆಯವರು ರಸ್ತೆಗಳನ್ನು ದುರಸ್ಥಿ ಪಡಿಸುವ ಕಾರ್ಯವನ್ನು ಮಾಡದೆ ಇರುವುದರಿಂದ ಇಂದು ರಸ್ತೆಗಳು ಈ ರೀತಿಯಾಗಿ ಹದಗೆಡಲು ಕಾರಣವಾಗಿದೆ.ಅಲ್ಲದೆ ಈ ರಸ್ತೆಯಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಹೇಗೆ ಸಾಗಿಸುವುದು ಎಂದು ಗ್ರಾಮಸ್ಥರು ಸಂಬಂಧ ಪಟ್ಟ ಇಲಾಖೆಯವರನ್ನು ಪ್ರಶ್ನಿಸಿದ್ದಾರೆ. ಆದ್ದರಿಂದ ಕೂಡಲೇ ಈ ರಸ್ತೆಯ ಗುಂಡಿ ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ತಪ್ಪಿದರೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಕೂಡಲೇ ಕಾಮಗಾರಿ ಕೈಗೊಳ್ಳದಿದ್ದಲ್ಲಿ ನಾಗರಿಕರಿಂದ ಪ್ರತಿಭಟನೆಯ ಎಚ್ಚರಿಕೆ
ನಾಪೋಕ್ಲು ವಿನಿಂದ ವಿರಾಜಪೇಟೆಗೆ ಹೋಗುವ ಮುಖ್ಯ ರಸ್ತೆಯ ಕೋಟೇರಿ ಬಳಿಯಲ್ಲಿ ನಡೆಯಲಾಗದಂತಹ ಪರಿಸ್ಥಿತಿಯಿದೆ. ಈ ರಸ್ತೆಯನ್ನು ದುರಸ್ತಿ ಪಡಿಸಲು ಹಲವಾರು ಬಾರಿ ಸಂಬಂಧಿಸಿದ ಇಲಾಖೆಯ ಗಮನ ಸೆಳೆದರೂ ಇದುವರೆಗೂ ಗುಂಡಿಯನ್ನು ಮುಚ್ಚದೆ ರಸ್ತೆ ಹದಗೆಡಲು ಕಾರಣರಾಗಿದ್ದಾರೆ. ಕೂಡಲೇ ಗುಂಡಿಯನ್ನು ಮುಚ್ಚಿ ಅನುಕೂಲ ಮಾಡಿಕೊಡಬೇಕು ತಪ್ಪಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ.
ಎಂ. ಎ. ಮೊಯ್ದು---------------------------------------------------------------------------------
ಈ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ ವಾಹನಚಾಲಕರು ಪ್ರಾಣವನ್ನು ಕೈಯಲ್ಲಿಟ್ಟು ಸಂಚರಿಸಬೇಕಿದೆ. ಗುಂಡಿಗಳಿಂದ ತುಂಬಿದ ಈ ರಸ್ತೆಯಲ್ಲಿ ಆಟೋರಿಕ್ಷಾ ಓಡಿಸುವುದೇ ಕಷ್ಟವಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಗುಂಡಿಯನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.




No comments
Post a Comment