ನಾಡಿನ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ

No comments


ಮಡಿಕೇರಿ (Times Of Coorg):-ನಾಡಿನ ಜೀವ ನದಿ ಕಾವೇರಿ ಉಗಮಸ್ಥಳ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವವು ಶನಿವಾರ ಬೆಳಗ್ಗೆ 7 ಗಂಟೆ 4 ನಿಮಿಷದ ಶುಭ ಕನ್ಯಾ ಲಗ್ನದಲ್ಲಿ ಸಂಭವಿಸಿತು. 

      ಸಂಪ್ರದಾಯದಂತೆ ತಾಯಿ ಕಾವೇರಿ ಮಾತೆಗೆ ಪೂಜಾ ವಿಧಿವಿಧಾನಗಳು ನಡೆದವು. ತಲಕಾವೇರಿ-ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯು ಪೂಜಾ ಕಾರ್ಯಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿತ್ತು. 

     ತಾಯಿ ಕಾವೇರಿ ಮಾತೆ, ಪುಣ್ಯ ಕ್ಷೇತ್ರ ತಲಕಾವೇರಿ ಪವಿತ್ರ ತೀರ್ಥೋದ್ಭವ ಸಂದರ್ಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಜಿ.ಪಂ ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್,  ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿ.ಪಂ ಸಿಇಒ ಭನ್ವರ್ ಸಿಂಗ್ ಮೀನಾ, ಡಿಎಫ್‍ಒ ಪ್ರಭಾಕರನ್, ನೀಲೇಶ್ ಶಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಡಿವೈಎಸ್‍ಪಿ ದಿನೇಶ್ ಕುಮಾರ್, ತಲಕಾವೇರಿ ಭಗಂಡೇಶ್ವರ ದೇವಾಲಯ ಇಒ ಬಿ.ಎಂ.ಕೃಷ್ಣಪ್ಪ ಇತರರು ಇದ್ದರು.

 ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ಮಾತನಾಡಿ ಈ ವರ್ಷವೂ ಸಹ ಕಾವೇರಿ ತಾಯಿ ದರ್ಶನ ನೀಡಿದ್ದಾಳೆ. ಪ್ರಾಕೃತಿಕ ವಿಕೋಪ ತೊಂದರೆ ಇಲ್ಲದಂತೆ ಮಾಡಲು ಮತ್ತು ಕೋವಿಡ್ ಸೋಂಕು ದೂರಾಗಲು ಕಾವೇರಿ ತಾಯಿಯ ಆಶೀರ್ವಾದ ಬೇಕಿದೆ ಎಂದರು.

      ಕೋವಿಡ್ ಸೋಂಕು ದೂರವಾಗಿ ರಾಜ್ಯದಲ್ಲಿ ಸುಖ, ಶಾಂತಿ, ಸಮೃದ್ಧಿ ತರುವಂತಾಗಲಿ ಎಂದು ತಾಯಿ ಕಾವೇರಿ ಬಳಿಯಲ್ಲಿ ಪ್ರಾರ್ಥಿಸಿದೆ  ಎಂದು ಸಚಿವರಾದ ವಿ.ಸೋಮಣ್ಣ ಅವರು ಹೇಳಿದರು. 

     ಶಾಸಕರಾದ ಅಪ್ಪಚ್ಚು ರಂಜನ್ ಅವರು ಮಾತನಾಡಿ ಎಲ್ಲಾ ಸಂಕಷ್ಟಗಳನ್ನು ನಿವಾರಿಸುವಂತೆ ಮಾತೆ ಕಾವೇರಿಯಲ್ಲಿ ಪ್ರಾರ್ಥಿಸಲಾಯಿತು ಎಂದು ತಿಳಿಸಿದರು.

No comments

Post a Comment