ಅನ್‍ಲಾಕ್ 3 ಅವಧಿಯ ಮಾರ್ಗಸೂಚಿ : ಕೊಡಗು ಜಿಲ್ಲಾಧಿಕಾರಿ ಆದೇಶ

No comments

      ಮಡಿಕೇರಿ (Times Of Coorg):-ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್-ರೆಗ್ಯೂಲೇಷನ್-2020ರ ನಿಯಮ , ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್-2005ರ ಕಲಂ 24(ಎ),(ಬಿ), 30(2), 33 ರಡಿ ಮತ್ತು ದಂಡಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿಯಲ್ಲಿ ದತ್ತವಾದ ಅಧಿಕಾರದಂತೆ ಸರ್ಕಾರದ ಆದೇಶ, ಮಾರ್ಗಸೂಚಿ ಹಾಗೂ ಸಾರ್ವಜನಿಕ ಹಿತಾಸಕ್ತಿಯಿಂದ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಅನ್‍ಲಾಕ್ 3 ಅವಧಿಯ ನಿರ್ಬಂಧಾಜ್ಞೆಯನ್ನು ಆಗಸ್ಟ್, 31 ರವರೆಗೆ ಜಾರಿಯಲ್ಲಿರುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶ ಹೊರಡಿಸಿದ್ದಾರೆ.

      ಕೊಡಗು ಜಿಲ್ಲೆಯಲ್ಲಿ ಕಂಟೈನ್‍ಮೆಂಟ್ ವಲಯಗಳ ಹೊರಭಾಗದಲ್ಲಿ ಈ ಚಟುವಟಿಕೆ ಹೊರತುಪಡಿಸಿ ಉಳಿದಂತೆ ಅನುಮತಿಸಲಾದ ಎಲ್ಲಾ ಚಟುವಟಿಕೆಗಳನ್ನು ನಿಯಮಾನುಸಾರ ನಡೆಸಬಹುದಾಗಿದೆ. ಮಾಹಿತಿ ಇಂತಿದೆ.

      ಶಾಲಾ-ಕಾಲೇಜು, ಶೈಕ್ಷಣಿಕ, ತರಬೇತಿ, ಕೋಚಿಂಗ್ ಕೇಂದ್ರಗಳ ಚಟುವಟಿಕೆಗಳು ಆಗಸ್ಟ್, 31 ರವರೆಗೆ ಇರುವುದಿಲ್ಲ. ಆದಾಗ್ಯೂ, ಆನ್‍ಲೈನ್, ದೂರ ಶಿಕ್ಷಣ ನಡೆಸಬಹುದಾಗಿದೆ.

      ಸಿನಿಮಾ ಹಾಲ್, ಈಜು ಕೊಳ, ಮನೋರಂಜನಾ ಪಾರ್ಕ್, ಥಿಯೇಟರ್‍ಗಳು, ಬಾರ್ ಮತ್ತು ಅಡಿಟೋರಿಯಂ, ಅಸೆಂಬ್ಲಿ ಹಾಲ್ ಮತ್ತು ಇಂತಹ ಸ್ಥಳಗಳು ಯೋಗ ಕೇಂದ್ರಗಳು ಮತ್ತು ಜಿಮ್ನಾಸಿಯಂಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಎಸ್‍ಒಪಿ ಸ್ವೀಕೃತವಾದ ನಂತರ 2020ರ ಆಗಸ್ಟ್, 05 ರಿಂದ ನಡೆಸಬಹುದಾಗಿದೆ.

      ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕøತಿಕ, ಧಾರ್ಮಿಕ ಕಾರ್ಯಕ್ರಮಗಳು ಮತ್ತು ಇತರೆ ಹೆಚ್ಚು ಸಂಖ್ಯೆ ಒಗ್ಗೂಡುವಿಕೆಗಳು.

      ಸ್ವಾತಂತ್ರ್ಯ ದಿನಾಚರಣೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾ ಉಪ ವಿಭಾಗ, ತಾಲ್ಲೂಕು, ನಗರ, ಸ್ಥಳೀಯ, ಗ್ರಾಮ ಪಂಚಾಯಿತಿ ಮತ್ತು ಮನೆಗಳಲ್ಲಿ ನಡೆಸುವುದು.

      ಕಂಟೈನ್‍ಮೆಂಟ್ ವಲಯಗಳಲ್ಲಿ ಹಾಲಿ ಚಾಲ್ತಿಯಲ್ಲಿರುವ ಕಾರ್ಯ ವಿಧಾನದಂತೆ ಲಾಕ್‍ಡೌನ್ ನಿಯಮ ಜಾರಿಯಲ್ಲಿದೆ. ನಿಯಮಿತ ವೈದ್ಯಕೀಯ ತಪಾಸಣೆ/ ತುರ್ತು ಸಂದರ್ಭ ಅಥವಾ ಅಗತ್ಯ ವಸ್ತುಗಳ ಖರೀದಿ ಹಿನ್ನೆಲೆ ಹೊರತುಪಡಿಸಿ 65 ವರ್ಷ ಮೇಲ್ಪಟ್ಟವರು, ಸಹ ಅಸ್ವಸ್ಥತೆ ಉಳ್ಳವರು, ಗರ್ಭಿಣಿ ಮಹಿಳೆಯರು, 10 ವರ್ಷದ ಒಳಗಿನ ಮಕ್ಕಳು ತಮ್ಮ ಮನೆಯಿಂದ ಹೊರಬರಬಾರದು. 

      ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮೂಗು ಮತ್ತು ಬಾಯಿಯನ್ನು ಮುಚ್ಚುವಂತೆ ಮುಖಗವಸು ಧರಿಸಬೇಕು. ಮತ್ತು ಮತ್ತೊಬ್ಬರಿಂದ ಕನಿಷ್ಠ  2 ಮೀಟರ್ (6 ಅಡಿ)  ಸಾಮಾಜಿಕ ಅಂತರ ಕಾಯ್ದುಕೊಳ್ಳತಕ್ಕದ್ದು. ಉಲ್ಲಂಘನೆಗೆ ಸ್ಥಳದಲ್ಲೇ ರೂ.100 ದಂಡ ವಿಧಿಸಿ ವಸೂಲಿ ಮಾಡಲಾಗುವುದು. ಮದುವೆ ಕಾರ್ಯಕ್ರಮಗಳಲ್ಲಿ ಗರಿಷ್ಠ 50 ಮತ್ತು ಅಂತ್ಯ ಸಂಸ್ಕಾರಗಳಂತಹ ಕಾರ್ಯಕ್ರಮಗಳಲ್ಲಿ ಗರಿಷ್ಠ 20 ಕ್ಕಿಂತ ಹೆಚ್ಚಿಗೆ ಜನ ಸೇರುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಮದ್ಯಪಾನ, ಬೀಡ, ಗುಟ್ಕಾ ಹಾಗೂ ತಂಬಾಕು ಸೇವನೆ ನಿಷೇಧಿಸಿದೆ.

      ಸಾರ್ವಜನಿಕ ಹಿತಾಸಕ್ತಿಯಿಂದ ಈ ಆದೇಶ ಹೊರಡಿಸಲಾಗಿದ್ದು, ಗುಂಪು ಸೇರುವುದು ಮತ್ತಿತರವನ್ನು ಮಾಡುವಂತಿಲ್ಲ.  ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.

No comments

Post a Comment