ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸಿ: ಸ್ವಾಮಿ ಬೋದಸ್ವರೂಪಾನಂದ ಮಹರಾಜ್

No comments

ಪೊನ್ನಂಪೇಟೆ:-ದಾನಗಳಲ್ಲಿ ಶ್ರೇಷ್ಠವಾದ ದಾನ ರಕ್ತದಾನ. ಬೇರೆ ಯಾವುದೇ ದಾನದಿಂದ ಮನುಷ್ಯನ ಜೀವ ಉಳಿಸಲು ಸಾಧ್ಯವಿಲ್ಲ. ರಕ್ತ ಹಲವರ ಜೀವ ರಕ್ಷಕ ಆಗಬಹುದು ಎಂದು ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿಬೋದಸ್ವರೂಪಾನಂದ ಮಹರಾಜ್ ನುಡಿದರು. 

ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದ ಆಸ್ಪತ್ರೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಆಶ್ರಯ ಹಸ್ತ ಟ್ರಸ್ಟ್ ಸರಗೂರು, ಕೊಡಗು ಜಿಲ್ಲಾ ರಕ್ತನಿಧಿ ಕೇಂದ್ರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕೊಡಗು ಪತ್ರಿಕಾ ಭವನ ಟ್ರಸ್ಟ್, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಪೊನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮ, ಗೋಣಿಕೊಪ್ಪ ರೋಟರಿ ಕ್ಲಬ್, ಗೋಣಿಕೊಪ್ಪ ವಾಹನ ಚಾಲಕರ ಸಂಘ, ಗೋಣಿಕೊಪ್ಪ ಆಟೋ ಚಾಲಕರ ಸಂಘ ಮತ್ತು ಪೊನ್ನಂಪೇಟೆ ಆಟೋ ಚಾಲಕರ ಸಂಘದ ಸಹಯೋಗದಲ್ಲಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. 

ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ಅಭಾವದಿಂದ ಸಾವು ಸಂಭವಿಸದಂತೆ ರಕ್ತ ಶೇಖರಿಸಿಡುವವರಿಗೆ ಸಹಕಾರ ನೀಡುವುದು ಎಲ್ಲರ ಕರ್ತವ್ಯ ಎಂದರು. 

ಜಿಲ್ಲಾ ರಕ್ತ ನಿಧಿ ಕೇಂದ್ರದ ಡಾ.ಕೆ.ಪಿ.ಕರುಂಬಯ್ಯ ಅವರು ಮಾತನಾಡಿ ಶೇಖರಿಸಿದ ರಕ್ತವನ್ನು ರೋಗಿಗಳ ಅವಶ್ಯಕತೆಗೆ ತಕ್ಕಂತೆ ವಿಂಗಡಿಸಿ ಶೇಖರಿಸಿ ಬೇಕಾದ ಸಂದರ್ಭದಲ್ಲಿ ವಿತರಿಸುವ ವ್ಯವಸ್ಥೆಯ ಬಗ್ಗೆ ಮಾಹಿತಿ ನೀಡಿದರು. 

ಸಭೆಯ ಅಧ್ಯಕ್ಷತೆ ವಹಿಸಿದ್ದ ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟಿನ ಸಮುದಾಯ ಆರೊಗ್ಯ ಕಾರ್ಯಕ್ರಮಗಳ ಮುಖ್ಯಸ್ಥರಾದ ಡಾ.ಡೆನ್ನಿಸ್ ಚೌಹಾನ್ ಮಾತನಾಡಿ ತುರ್ತು ಸಂದರ್ಭದಲ್ಲಿ ರಕ್ತದ ಕೊರತೆಯಿಂದ ಹಲವಾರು ಬಾರಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಆದ್ದರಿಂದ ಸಂಸ್ಥೆಯ ವತಿಯಿಂದ ಎಲ್ಲ ಸಂಘ ಸಂಸ್ಥೆಗಳ ಸಹಕಾರದಿಂದ ಈ ಕಾರ್ಯಕ್ರಮ ನಡೆಸುತ್ತಿರುವುದಾಗಿ ತಿಳಿಸಿದರು.

ವೇದಿಕೆಯಲ್ಲಿ ಸ್ವಾಮಿ ಪರಹಿತಾನಂದ ಮಹರಾಜ್, ಶ್ರೀ ರಾಮಕೃಷ್ಣ ಆಶ್ರಮದ ಆಸ್ಪತ್ರೆಯ ಡಾ. ವಿಕಾಸ್ ಮಂಡಲ್,  ಸ್ವಾಮಿ  ವಿವೇಕಾನಂದ ಯೂತ್ ಮೂವ್ ಮೆಂಟ್‍ನ ಕೋಶಾಧಿಕಾರಿ ಗೋಣಿಕೊಪ್ಪಲಿನ ಡಾ.ಕೆ. ಚಂದ್ರಶೇಖರ್, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ಗೋಣಿಕೊಪ್ಪಲು ರೋಟರಿ ಕ್ಲಬ್‍ನ ಅಧ್ಯಕ್ಷರಾದ ಮೂಕಳೇರ ಬೀಟಾ  ಲಕ್ಷಣ್, ಕಾರ್ಯದರ್ಶಿ ಕೆ.ಸಿ.ಮುತ್ತಪ್ಪ, ಯೂತ್ ಮೂವ್ ಮೆಂಟಿನ ಡಾ.ವಿಶ್ವೇಶ್ ವಿಷುÐನಾಯಕ್, ವೆಂಕಟಸ್ವಾಮಿ, ಅಂಕಾಚಾರಿ, ಅನಂತ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ರಕ್ತದಾನ ಶಿಬಿರದಲ್ಲಿ 70 ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು. ಪ್ರತಿದಾನಿಗೆ ಸಂಘ ಸಂಸ್ಥೆಗಳ ಸಹಕಾರದಿಂದ ಎಳನೀರು, ಹಣ್ಣು ಹಂಪಲು ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ಸಂಸ್ಥೆಯ ಶಾಲಿನಿ ಸ್ವಾಗತಿಸಿ, ಕೃತಿ ವಂದಿಸಿದರು. ಗಾಯತ್ರಿ ನಿರೂಪಿಸಿದರು.

No comments

Post a Comment