*ರೈತ ವಿರೋಧಿ ಗೋಹತ್ಯೆ ಮಸೂದೆ ಹಿಂಪಡೆಯಲು ಎಸ್.ಡಿ.ಪಿ.ಐ ಆಗ್ರಹ*
ಬೆಂಗಳೂರು :ರಾಜ್ಯದ ಬಿಜೆಪಿ ಸರಕಾರವು ವಿಧಾನಸಭೆಯಲ್ಲಿ ಇಂದು ಅಂಗೀಕರಿಸಿರುವ ಗೋಹತ್ಯೆ ನಿಷೇಧ ಮಸೂದೆಯು ರೈತ ವಿರೋಧಿಯಾಗಿದ್ದು, ಈ ಮಸೂದೆಯನ್ನು ತಕ್ಷಣ ಹಿಂಪಡೆಯಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
ಆಹಾರಕ್ಕಾಗಿ ಬಳಸಲ್ಪಡುವ ವಿವಿಧ ಜಾನುವಾರುಗಳ ವಧೆಯನ್ನು ಈ ಮಸೂದೆಯ ಮೂಲಕ ನಿಷೇಧಿಸಿರುವುದು ಖಂಡನೀಯ. ಇದು ರೈತರ ಮತ್ತು ಪಶು ಸಂಗೋಪನೆ ಮಾಡಿ ಜೀವನ ಸಾಗಿಸುವ ಮಂದಿಗೆ ಆರ್ಥಿಕ ನಷ್ಟವನ್ನು ತಂದೊಡ್ಡಲಿದೆ. ಮಾತ್ರವಲ್ಲ, ಇದು ದಲಿತರು, ಅಲ್ಪಸಂಖ್ಯಾತರು ಮತ್ತಿತರ ವರ್ಗಗಳ ಆಹಾರದ ಹಕ್ಕಿನ ಮೇಲಿನ ದಾಳಿಯೂ ಆಗಿದೆ. ವಿದೇಶಕ್ಕೆ ಗೋಮಾಂಸ ನಿರಂತರವಾಗಿ ರಫ್ತು ಆಗುತ್ತಿದೆಯಾದರೂ, ಈ ಬಗ್ಗೆ ಬಿಜೆಪಿ ಸರಕಾರ ಸೊಲ್ಲೆತ್ತುತ್ತಿಲ್ಲ.
ವಿಪಕ್ಷಗಳು, ದಲಿತರು, ಅಲ್ಪಸಂಖ್ಯಾತರು ಮತ್ತಿತರ ವರ್ಗಗಳು ಒಂದಾಗಿ ಈ ಮಸೂದೆ ವಿರುದ್ಧ ತೀವ್ರ ಹೋರಾಟ ನಡೆಸಬೇಕೆಂದು ಕರೆ ನೀಡಿರುವ ಅಫ್ಸರ್ ಕೂಡ್ಲೀಪೇಟೆ, ರೈತ ವಿರೋಧಿ ಮತ್ತು ಜನರ ಆಹಾರದ ಹಕ್ಕನ್ನು ಕಸಿಯುವ ಇಂತಹ ಕರಾಳ ಕಾನೂನುಗಳ ವಿರುದ್ಧದ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದು ಹೇಳಿದ್ದಾರೆ.
ಸಧನದಲ್ಲಿ ಈ ಮಸೂದೆಯನ್ನು ಮಂಡಿಸುವಾಗ ಕಾಂಗ್ರೆಸ್ ಪಕ್ಷ ಸಭಾ ತ್ಯಾಗ ಮಾಡುವ ಬದಲಾಗಿ ಯಾವ ಮಟ್ಟದಲ್ಲಿ ಈ ಮಸೂದೆ ಯಲ್ಲಿರುವ ಕೃಷಿ ವಿರೋಧಿ ಅಂಶಗಳನ್ನು ಬೊಟ್ಟು ಮಾಡಿ ಪ್ರತಿರೋಧ ತೋರಬೇಕಾಗಿತ್ತೂ ಅದರಲ್ಲಿ ಎಡವಿದೆ ಎಂದು ಸಹ ಅವರು ಆರೋಪಿಸಿದ್ದಾರೆ.
No comments
Post a Comment