ವಿಶ್ವಕೋಶ, ನಿಘಂಟು, ಸಾಹಿತ್ಯ ದಾಖಲೀಕರಣದಿಂದ ಅರೆಭಾಷೆ ಉಳಿಸಲು ಸಾಧ್ಯ: ಡಾ|ಬಿ.ವಿ.ವಸಂತ ಕುಮಾರ್
ಮಡಿಕೇರಿ (Times Of Coorg):-ಪ್ರತೊಯೊಬ್ಬರ ಆಲೋಚನೆ, ಆಸಕ್ತಿಗಳನ್ನು ಅಭಿವ್ಯಕ್ತಪಡಿಸಲು ಭಾಷೆಯು ಪ್ರಮುಖ ಪಾತ್ರ ವಹಿಸಲಿದ್ದು, ಆ ನಿಟ್ಟಿನಲ್ಲಿ ಭಾಷೆಯ ಮೇಲಿನ ಪ್ರೀತಿ ಇದ್ದಾಗ ಮಾತ್ರ ಒಂದು ಭಾಷೆ ಉಳಿಯಲು ಸಾಧ್ಯವಾಗುತ್ತದೆ. ಹಾಗೆಯೇ ಶಬ್ದಕೋಶಗಳು ಇದ್ದಾಗ ಮಾತ್ರ ಭಾಷೆಯು ಅಸ್ತಿತ್ವದಲ್ಲಿರುತ್ತದೆ, ನಿಘಂಟು, ವಿಶ್ವಕೋಶಗಳೇ ಇಲ್ಲದ ಸಂದರ್ಭದಲ್ಲಿ ಒಂದು ಭಾಷೆ ಅವನತಿಯ ಹಾದಿಯನ್ನು ಹಿಡಿಯುತ್ತದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿಯ ವತಿಯಿಂದ ಸಂಪಾಜೆಯ ಪಯಸ್ವಿನಿ ಕೃ.ಪ.ಸ.ಸಂಘದ "ಸಹಕಾರ ಭವನ"ದಲ್ಲಿ ನಡೆದ ಅರೆಭಾಷೆ ‘ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಭಾಷೆ ಅಕಾಡೆಮಿಯ ಚಟುವಟಿಕೆ ಮತ್ತು ಸ್ವರೂಪ ಮತ್ತು ಸಾಧ್ಯತೆಗಳ ಕುರಿತು ಅವರು ಮಾತನಾಡಿದರು.
ಭಾಷೆಯು ಸಂಸ್ಕೃತಿ, ಪ್ರಕೃತಿಯನ್ನೊಳಗೊಂಡು ಸಮರ್ಥ ದಾಖಲೀಕರಣವಾದರೆ ಒಂದು ಜನಾಂಗ, ಪ್ರಾದೇಶಿಕತೆ, ಬಹುತ್ವ ಉಳಿಯುತ್ತದೆ. ವ್ಯಕ್ತಿಗಳ ನಿರ್ಮಾಣ ಮಾಡುವ, ಮನುಷ್ಯನಲ್ಲಿರುವ ಅಸಮಾನತೆ, ಬಡತನ, ಕಣ್ಣಿರನ್ನು ಒರೆಸುವ ಕೆಲಸ ಅಕಾಡೆಮಿ ಮಾಡಬೇಕಾಗುತ್ತದೆ. ಭಾಷೆಗೆ ಸಂಬಂಧಿಸಿದಂತೆ ಕಾವ್ಯ, ಕೃತಿಗಳು ಹೊರಬಂದು ಕೃತಿಕಾರರ ಹೆಸರುಗಳು ಅಜರಾಮರವಾಗಿರುತ್ತದೆ ಎಂದರು.
ಭಾಷೆ ಮತ್ತು ಸಂಸ್ಕೃತಿ ಉಳಿಸುವಲ್ಲಿ ಸಮುದಾಯದ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡಿದ ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಹಾಗೂ ಮಡಿಕೇರಿ ತಾ.ಪಂ.ಸದಸ್ಯ ನಾಗೇಶ್ ಕುಂದಲ್ಪಾಡಿ ಅವರು ಪ್ರಸ್ತುತ ಸಂದರ್ಭದಲ್ಲಿ ಭತ್ತದ ಬೇಸಾಯ ಪದ್ಧತಿಗಳು ನಶಿಸಿಹೋದಂತೆ ಅನೇಕ ಅರಾಧನೆ, ಆಚರಣೆಗಳು ಅದರೊಂದಿಗೆ ನಶಿಸಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ಸಮುದಾಯದ ಭಾಷೆ ಇಂದು ಪರಿಸರದ ಭಾಷೆಯಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಅಕಾಡೆಮಿಯು ಹಬ್ಬ ಹರಿದಿನ ಈ ವಾತವರಣ ಸೃಷ್ಟಿ ಮಾಡುವುದರ ಜೊತೆಗೆ ಕಮ್ಮಟಗಳನ್ನು ನಡೆಸಿ ಯುವಜನರನ್ನು ಭಾಷಿಕ ಸಾಂಸ್ಕೃತಿಕ ಹಾಗೂ ಬೌದ್ಧಿಕ ನೆಲೆಯಲ್ಲಿ ಬೆಳೆಸುವ ಕೆಲಸವಾಗಬೇಕಿದೆ ಎಂದು ನಾಗೇಶ್ ಕುಂದಲ್ಪಾಡಿ ಅವರು ಸಲಹೆ ಮಾಡಿದರು.
ಇಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಬರವಣಿಗೆಗೆ, ಸಂಶೋಧನಾ ಲೇಖನಗಳ ಬಗ್ಗೆ ವಿದ್ವಾಂಸರಿಂದ ತರಬೇತಿಯ ಅಗತ್ಯವಿದೆ, ಅರೆಭಾಷೆ ಸಂಸ್ಕೃತಿಯ ಸಿದ್ಧ ವೇಷ, ಶೋಭಾನೆ ಹಾಡು, ಹಸೆಬರೆಯುವುದು, ಕೊಳಲು ವಾದನದ ಹೊಸ ಪ್ರಯೋಗ, ಶಿರಾಡಿಭೂತ ಅರೆಭಾಷೆ ಸಂಸ್ಕೃತಿಯನ್ನು ಒಳಗೊಂಡಿರುವ ನಾಟಕಗಳಿಗೆ ಅಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಉಳಿಸುವ ಮತ್ತು ದಾಖಲಿಸುವ ಪ್ರಯತ್ನವಾಗಬೇಕಿದೆ ಎಂದು ಅವರು ನುಡಿದರು.
ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎನ್.ಎಸ್.ದೇವಿ ಪ್ರಸಾದ್ ಅವರು ನಂದಾ ದೀಪ ಬೆಳಗಿಸುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿಯ ಅಧ್ಯಕ್ಷರಾದ ಲಕ್ಷೀನಾರಾಯಣ ಕಜೆಗದ್ದೆಯವರು ವಹಿಸಿ ಕಾರ್ಯಕ್ರಮದ ಉದ್ದೇಶದ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಯಸ್ವಿನಿ.ಪ್ರಾ.ಕೃ.ಪ.ಸ.ಸಂಘ ಸಂಪಾಜೆ ಇದರ ಅಧ್ಯಕ್ಷರಾದ ಎನ್.ಸಿ ಅನಂತ ಹಾಗೂ ಅರೆಭಾಷೆ ಅಭಿಮಾನಿಗಳು, ಭಾಷಾ ವಿದ್ವಾಂಸರು ಆಯೋಜಕರು, ಅಕಾಡೆಮಿಯ ಸದಸ್ಯರುಗಳು ಈ ಸಂದರ್ಭ ಉಪಸ್ಥಿತರಿದ್ದರು.
ಅಕಾಡೆಮಿಯ ಸದಸ್ಯೆ ಬೈತಡ್ಕ ಜಾನಕಿ ಬೆಳ್ಯಪ್ಪ ಅವರು ಪ್ರಾರ್ಥಿಸಿದರು. ಸದಸ್ಯ ಧನಂಜಯ ಅಗೋಳಿಕಜೆ ಸ್ವಾಗತಿಸಿದರು. ಸಹ.ಸಂಚಾಲಕ ಕುಸುಮಾಧರ ಎ.ಟಿ ಅವರು ನಿರೂಪಿಸಿದರು. ಸದಸ್ಯರು ಹಾಗೂ ಕಾರ್ಯಕ್ರಮದ ಸಂಚಾಲಕರಾದ ಪುರುಷೋತ್ತಮ ಕಿರ್ಲಾಯ ವಂದಿಸಿದರು.




No comments
Post a Comment