ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಸಂಸದ ಪ್ರತಾಪ್ ಸಿಂಹ ಮನವಿ

No comments

      ಮಡಿಕೇರಿ (Times Of Coorg):-ಲೋಕಸಭೆಯಲ್ಲಿ ಕಾಫಿ ಬೆಳೆಗಾರರ ಸಂಕಷ್ಟದ ಬಗ್ಗೆ ಗಮನ ಸೆಳೆಯುವಂತೆ ಮಾತನಾಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಕೊಡಗಿನ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು.

     ದೇಶದ ಒಟ್ಟು ಕಾಫಿ ಉತ್ಪಾದನೆ ಪೈಕಿ ಶೇ.70 ರಷ್ಟು ಕಾಫಿ ಕರ್ನಾಟಕದಿಂದಲೇ ಉತ್ಪಾದನೆಯಾಗುತ್ತಿದೆ. ಈ ಪೈಕಿ ಶೇ.98 ರಷ್ಟು ಕಾಫಿ ಬೆಳೆಗಾರರು ಸಣ್ಣ ಮತ್ತು ಮಧ್ಯಮ ವರ್ಗದವರಿದ್ದಾರೆ ಎಂದು ಸಂಸದರು ತಿಳಿಸಿದರು.

      2016 ಮತ್ತು 2017ರಲ್ಲಿ ಕಾಫಿ ಬೆಳೆಗಾರರು ಅನಾವೃಷ್ಟಿಯಿಂದ ತತ್ತರಿಸಿದ್ದರು. 2018 ರಿಂದೀಚೆಗೆ ಸತತ ಮೂರು ವರ್ಷ ಮಹಾಮಳೆ, ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ಕೊಡಗಿನ ಕಾಫಿ ಬೆಳೆಗಾರರು ತಮ್ಮ ಎಲ್ಲಾ ಕಾಫಿ, ಕರಿಮೆಣಸು ಬೆಳೆ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿದ್ದಾರೆ. ಕಾಫಿ ಸಸಿ ಮರು ನಾಟಿ ಕೂಡ ಮಣ್ಣು ಕುಸಿತ ಪರಿಣಾಮ ಸಾಧ್ಯವಾಗುತ್ತಿಲ್ಲ ಎಂದು ಪ್ರತಾಪ್ ಸಿಂಹ ಅವರು ವಿವರಿಸಿದ್ದಾರೆ.

      ಕಾಫಿ ಬೆಳಗಾರರಿಗೆ ಎನ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ನೀಡಲಾಗುತ್ತಿರುವ ಪರಿಹಾರ ಖಂಡಿತಾ ಸಾಲದಾಗಿದೆ. ವಿತ್ತ ಖಾತೆ  ಸಚಿವರಾದ ನಿರ್ಮಲ ಸೀತಾರಾಮ್ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಕೇಂದ್ರ ವಾಣಿಜ್ಯ ಸಚಿವ ಪಿಯುμï ಗೊಯಲ್ ಅವರು  ಕೂಡಲೇ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕಾಗಿದೆ ಎಂದು ಪ್ರತಾಪ್ ಸಿಂಹ ಸದನದಲ್ಲಿ ಮನವಿ ಮಾಡಿದರು.

      ತನ್ನ ಕ್ಷೇತ್ರವಾದ ಕೊಡಗು ಜಿಲ್ಲೆಯ 3 ಸಾವಿರ ಎಕರೆ ಕಾಫಿ ಕೃಷಿಭೂಮಿ ಸಂಪೂರ್ಣ ಹಾನಿಗೊಳಗಾಗಿದೆ. ಕಾಫಿ ಬೆಳೆಗಾರರ ಸಾಲದ ಮೇಲಿನ ಎಲ್ಲಾ ರೀತಿಯ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಪ್ರತಾಪ್ ಸಿಂಹ  ತಮ್ಮ ಗಮನಸೆಳೆಯುವ ಭಾಷಣದ ಮೂಲಕ ಒತ್ತಾಯಿಸಿದ್ದಾರೆ.

No comments

Post a Comment